ಮೇಘನ ರಾಜ್ ಸರ್ಜಾ ಅವರು ಕನ್ನಡದ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರುವವರು. ‘ರಾಜಾಹುಲಿ’, ‘ಆಟಗಾರ’, ‘ಕುರುಕ್ಷೇತ್ರ’ ಹೀಗೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಇವರು, ಇದೀಗ ಕೆಲವು ವರ್ಷಗಳಿಂದ ಚಿತ್ರರಂಗದಿಂದ, ನಟನೆಯಿಂದ ದೂರ ಉಳಿದಿದ್ದರು. ಇದೀಗ ಮೇಘನಾ ರಾಜ್ ಅವರು ಒಂದು ಹೊಸ ಸಿನಿಮಾದ ಜೊತೆಗೆ ಮರಳಿ ಚಂದನವನಕ್ಕೆ ಬರುತ್ತಿದ್ದಾರೆ. ಅದುವೇ ‘ತತ್ಸಮ-ತದ್ಭವ’. ಇಂದು ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಹೊಸ ವಿಶೇಷತೆಯೊಂದಕ್ಕೆ ಈ ಚಿತ್ರದ ಪೋಸ್ಟರ್ ಸಾಕ್ಷಿಯಾಗಿದೆ.
‘ಫ್ರೆಂಚ್ ಬಿರಿಯಾನಿ’ ಸಿನಿಮಾ ಖ್ಯಾತಿಯ ನಿರ್ದೇಶಕರಾದ ಪನ್ನಗಾಭರಣ ಹಾಗು ಸ್ಪೂರ್ತಿ ಅನಿಲ್ ಅವರು ಜೊತೆಯಾಗಿ ನಿರ್ಮಿಸುತ್ತಿರುವ ‘ತತ್ಸಮ ತದ್ಭವ’ ಸಿನಿಮಾಗೆ ಹೊಸ ನಿರ್ದೇಶಕರಾದ ವಿಶಾಲ್ ಆತ್ರೆಯ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಲನಚಿತ್ರವಾಗಿರಲಿದೆ. ವಿಶೇಷವೆಂದರೆ ‘ತತ್ಸಮ ತದ್ಭವ’ ಚಿತ್ರದ ಪೋಸ್ಟರ್ ಅನ್ನು ಸುಮಾರು ನೂರಕ್ಕೂ ಹೆಚ್ಚು ನಟನಟಿಯರು, ಒಂದೇ ಸಮಯದಲ್ಲಿ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಲೋಕಾರ್ಪಣೆ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಜಗತ್ತಿನಾದ್ಯಂತ ಸುಮಾರು 30ಕ್ಕೂ ಹೆಚ್ಚು ರಾಷ್ಟ್ರಗಳ ಕನ್ನಡ ಸಂಘಗಳು ಹಾಗು ಇತರ ಸಾಮಾಜಿಕ ಸಂಘಗಳು ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸಿನಿಮಾತಂಡಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ಮೇಘನಾ ರಾಜ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಸಿನಿಮಾ ಒಂದು ಮಹಿಳಾ ಪ್ರಧಾನ ಕಥೆಯಾಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಶೀಘ್ರದಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಚಿತ್ರಕ್ಕೆ ವಾಸುಕಿ ವೈಭವ್ ಅವರ ಸಂಗೀತವಿದ್ದು, ಶ್ರೀನಿವಾಸ್ ರಾಮಯ್ಯ ಅವರ ಛಾಯಾಗ್ರಾಹಣವಿದೆ. ರವಿ ಆರಾಧ್ಯ ಅವರ ಸಂಕಲನ, ನಿಖಿತ ಪ್ರಿಯಾ ಅವರ ವಸ್ತ್ರ ವಿನ್ಯಾಸ ಹಾಗು ಸಂತೋಷ್ ಪಂಚಾಲ್ ಅವರ ಕಲಾ ನಿರ್ದೇಶನದ ಚಿತ್ರದಲ್ಲಿರಲಿದೆ. ಇಂದು (ಫೆಬ್ರವರಿ 19) ಬಿಡುಗಡೆಯಾಗಿರುವ ಸಿನಿಮಾದ ಪೋಸ್ಟರ್ ಚಿತ್ರದ ಬಗೆಗೆ ನಿರೀಕ್ಷೆ ಹುಟ್ಟುವಂತೆ ಮಾಡಿದೆ.

