ನೈಜ ಘಟನೆಯನ್ನಿಟ್ಟುಕೊಂಡು ಬಣ್ಣದ ಲೋಕದಲ್ಲಿ ಮಿಂಚಲು ಬರುತ್ತಿರುವ ಶಶಿಕಾಂತ್ ಗಟ್ಟಿ ನಿರ್ದೇಶನದ ‘ರಾಂಚಿ’ ಸಿನಿಮಾದ ಟೀಸರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ.
ಚಿತ್ರದ ಬಗ್ಗೆ ಮಾತಾನಾಡಿರುವ ನಿರ್ದೇಶಕ ಶಶಿಕಾಂತ್ ಗಟ್ಟಿ ಈ ಹಿಂದೆ ನಾನು ಐಪಿಸಿ ಸೆಕ್ಷನ್ 300 ಎನ್ನುವ ಸಿನಿಮಾ ಮಾಡುತ್ತಿದ್ದೆ, ಆ ವೇಳೆ ನನಗೆ “ರಾಂಚಿ”ಯಿಂದ ಒಂದು ಕರೆ ಬರುತ್ತದೆ. ನೀವು ರೈಲ್ವೆ ಇಲಾಖೆ ಕುರಿತು ಒಂದು ಡಾಕ್ಯುಮೆಂಟರಿ ಮಾಡಿಕೊಡಬೇಕು. ರಾಂಚಿಗೆ ಬನ್ನಿ. ಅವರ ಪರಿಶುದ್ಧ ಹಿಂದಿ ಭಾಷೆ ಕೇಳಿ, ಇದು ಸರ್ಕಾರದಿಂದ ಬಂದಿರುವ ಕರೆ ಎಂದು ತಿಳಿದು ಸಂತೋಷವಾಯಿತು. ಆಮೇಲೆ ಯೋಚನೆ ಮಾಡಿದೆ. ಸರ್ಕಾರ ಇಂತಹ ವಿಷಯವನ್ನು ಟೆಂಡರ್ ಮೂಲಕ ಕರೆಯುತ್ತಾರೆ. ಇದು ಸುಳ್ಳು ಇರಬಹುದು ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಫೋನ್ ಮಾಡಿ ಈ ಬಗ್ಗೆ ಕೇಳಿದೆ. ಅವರು ಇದೆಲ್ಲಾ ಸುಳ್ಳು. ನೀವು ಇಲ್ಲಿಗೆ ಬರಬೇಡಿ ಎಂದರು. ಈ ರೀತಿ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಈ ರೀತಿಯ ಕರೆಯಿಂದ ಮೋಸ ಹೋಗಿದ್ದಾರೆ. ಈ ವಿಷಯವನ್ನಿಟ್ಟುಕೊಂಡೆ “ರಾಂಚಿ” ಸಿನಿಮಾ ಮಾಡಿದ್ದೇವೆ ಎಂದರು.


ನಾಯಕ ಪ್ರಭು ಮುಂಡ್ಕರ್ ಕಥೆ ಕೇಳಿ ನಟಿಸಲು ಒಪ್ಪಿದರು. ರುದ್ರಾನಂದ ಹಾಗೂ ಅರುಣ್ ಕುಮಾರ್ ನಿರ್ಮಾಣಕ್ಕೆ ಮುಂದಾದರು. ನೈಜಘಟನೆ ಆಧಾರಿತ ಸಿನಿಮಾವಿದು. “ರಾಂಚಿ”ಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. 2020 ರಲ್ಲೇ ಸೆನ್ಸಾರ್ ಆಗಿತ್ತು ಎಂದರು.
ನಟ ಪ್ರಭು ಮುಂಡ್ಕರ್ ಮಾತಾನಾಡಿ, ಕೋವಿಡ್ ಬಳಿಕ ಪ್ರೇಕ್ಷಕರ ಸಿನಿಮಾ ರುಚಿ ಬೇರೆ ರೀತಿ ಆಗಿದೆ. ” ಕೆ.ಜಿ.ಎಫ್”, “ಚಾರ್ಲಿ”, ” ಕಾಂತಾರ” ದಂತಹ ಹಿಟ್ ಸಿನಿಮಾಗಳೇ ಇದಕ್ಕೆ ನಿರ್ದಶನ ಎಂದರು.
ನಾನು ಮೊದಲು ಸೈಂಟಿಸ್ಟ್ ಆಗಿದ್ದೆ. ‘ಡಂಬಲ್ ಇಂಜಿನ್’ ಚಿತ್ರದಲ್ಲಿ ನಟಿಸುವ ವೇಳೆ ಶಶಿಕಾಂತ್ ಅವರು ಈ ಕಥೆ ಹೇಳಿದರು. ನೈಜ ಘಟನೆಯ ಕಾರಣದಿಂದ ಈ ಕಥೆ ಇಷ್ಟವಾಯಿತು ಅದಕ್ಕೆ ಒಪ್ಪಿಕೊಂಡೆ ಎಂದರು.
ಪ್ರಭು ಅವರ ಮೂಲಕ ನಿರ್ದೇಶಕ ಶಶಿಕಾಂತ್ ಗಟ್ಟಿ ಅವರ ಪರಿಚಯವಾಯಿತು. ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ಅರುಣ್ ಕುಮಾರ್ ತಿಳಿಸಿದರು.
ದಿವ್ಯ ಉರುಡಗ, ಟೋಟ ರಾಯ್ ಚೌಧರಿ, ಆರತಿ ನಾಯರ್, ಲಕ್ಷ್ಮಣ್ ಗೌಡ, ಸುರೇಶ್ ಹೆಬ್ಳೀಕರ್, ಉಷಾ ಭಂಡಾರಿ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನವೆಂಬರ್ 11 ರಂದು ಚಿತ್ರ ತೆರೆಗೆ ಬರುತ್ತಿದೆ.



