ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳೇ ಸಾರ್ವಭೌಮರು ಎಂಬ ಮಾತಿದ್ದರೂ, ಸತ್ಯಾಂಶ ಎಲ್ಲರಿಗೂ ತಿಳಿದಿರುವುದೇ. ಒಬ್ಬ ಸಾಮಾನ್ಯ ಪ್ರಜೆಗೆ ಇರುವಂತಹ ಮತದಾನದ ಹಕ್ಕು ಎಂತದ್ದು ಝೆಡ್ ರಾಜಕಾರಣದ ಶಕ್ತಿ ಎಂತದ್ದು ಎಂದು ಹೊಸ ಹೊಸ ರೀತಿಗಳಲ್ಲಿ ಸಾರುವ ಹಲವು ಸಿನಿಮಾಗಳು ನಮ್ಮಲ್ಲಿ ಬಂದಿವೆ. ಅದೇ ರೀತಿಯ ಇನ್ನೊಂದು ಸಿನಿಮಾ ಇದೀಗ ತನ್ನ ಟ್ರೈಲರ್ ನಿಂದ ಎಲ್ಲೆಡೆ ಸದ್ದು ಮಾಡುತ್ತಿದೆ. ಆ ಸಿನಿಮಾವೇ ಆರ್ ರಂಗನಾಥ್ ಅವರ ನಿರ್ದೇಶನದ ‘ಪ್ರಭುತ್ವ’ ಸಿನಿಮಾ. ರವಿರಾಜ್ ಎಸ್ ಕುಮಾರ್ ಅವರ ನಿರ್ಮಾಣದಲ್ಲಿ ಚೇತನ್ ಚಂದ್ರ ಅವರು ನಾಯಕರಾಗಿ ನಟಿಸಿರುವ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸದ್ಯ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.


ಟ್ರೈಲರ್ ನಲ್ಲಿ ಕಾಣುವಂತೆ ಕಥಾನಾಯಕ ಒಬ್ಬ ರೈತ. ದೊಡ್ಡ ದೊಡ್ಡ ರಾಜಕಾರಣಿಗಳು ಹಣದ ಆಸೆಯಿಂದ ಹಾಗು ಹಣದ ದರ್ಪದಿಂದ ಜನರನ್ನ ಲೂಟಿ ಮಾಡುತ್ತಿರುತ್ತಾರೆ. ಇದರಿಂದ ಸಾಮಾನ್ಯರ ಜೊತೆಗೇ ರೈತರಿಗೂ ಅಪಾರ ಸಂಕಷ್ಟ ಎದುರಾಗುತ್ತಿರುತ್ತದೆ. ಇದೆಲ್ಲದರ ವಿರುದ್ಧ ದನಿಯೆತ್ತುವ ಧಣಿಯಾಗಿ ನಮ್ಮ ಕಥಾನಾಯಕ ಮೂಡುತ್ತಾನೆ. ಆತನೇ ರಾಜಕೀಯ ಪ್ರವೇಶ ಮಾಡುವಂತಹ ನಿರ್ಧಾರವನ್ನ ಜನರ ಒಳಿತಿಗಾಗಿ ಅವನ ತಂದೆಯೇ ಮಾಡುತ್ತಾರೆ. ಈ ಎಲ್ಲ ಸಂಘರ್ಷದಲ್ಲಿ ಅವನು ಎದುರಿಸೋ ಸವಾಲುಗಳು, ಇದರಿಂದ ಜನರಿಗೆ ಆತ ಮತದಾನದ ಮಹತ್ವ ಹೇಗೇ ಅರ್ಥ ಮಾಡಿಸುತ್ತಾನೆ, ಅವನು ಏನೆಲ್ಲಾ ಕಷ್ಟ ಎದುರಿಸಬೇಕಾಗುತ್ತದೆ ಎಂಬುದನ್ನೆಲ್ಲ ಸಿನಿಮಾದ ಕಥೆ ಹೇಳುತ್ತದೆ. ಶುರುವಿನಿಂದ ಕೊನೆಯವರೆಗೂ ಹಿಡಿದಿಡುವಂತೆ ಟ್ರೈಲರ್ ಮೂಡಿಬಂದಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟುತ್ತಿದೆ.


ಆರ್ ರಂಗನಾಥ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಚೇತನ್ ಚಂದ್ರ ಅವರು ನಾಯಕರಾದರೆ, ಪಾವನ ಗೌಡ ಅವರು ನಾಯಕಿಯಾಗಿ ನಟಿಸಿದ್ದಾರೆ. ಇವರ ಜೊತೆಗೇ ಪ್ರಮುಖ ಪಾತ್ರಗಳಲ್ಲಿ ಶರತ್ ಲೋಹಿತಾಶ್ವ, ಅವಿನಾಶ್, ಲೋಕಿ, ನಾಸರ್ ಮುಂತಾದ ಹೆಸರಾಂತ ನಟರು ನಟಿಸಿದ್ದಾರೆ. ರವಿರಾಜ್ ಎಸ್ ಕುಮಾರ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರದ ಕಥೆ ಬರೆದಿರುವುದು ಅವರ ತಂದೆ ಡಾ| ಎಂ ಶಿವಕುಮಾರ್ ಮೇಘಡಹಳ್ಳಿ ಅವರು. ಎಮಿಲ್ ಮೊಹಮದ್ ಅವರ ಸಂಗೀತ ಕೂಡ ಅದ್ಭುತವಾಗಿ ಮೂಡಿಬಂದಿದೆ. ಸದ್ಯ ಬಿಡುಗಡೆಯಗಿರುವ ಟ್ರೈಲರ್ ನಿಂದ ಇದೊಂದು ಭರವಸೆ ಮೂಡಿಸೋ ಚಿತ್ರ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿ ಮೂಡಿದೆ.



