ಹಾಡು, ಟೀಸರ್ ಮೂಲಕ ಗಮನ ಸೆಳೆದಿರುವ “ಪದವಿ ಪೂರ್ವ” ಸಿನಿಮಾ ತೆರೆಗೆ ಬರಲಿ ದಿನಗಣನೆ ಬಾಕಿ ಉಳಿದಿದೆ. ಸಿನಿಮಾದ ಟ್ರೇಲರ್ ಇತ್ತೀಚೆಗೆ ಜೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ರಿಲೀಸ್ ಮಾಡಿ, ಶುಭ ಹಾರೈಸಿದರು.
ಟ್ರೇಲರ್ ರಿಲೀಸ್ ಮಾಡಿ ಮಾತಾನಾಡಿದ ಅವರು, ಈ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಉತ್ಸಾಹ ನೋಡಿದರೆ ಖುಷಿಯಾಗುತ್ತಿದೆ. ಟ್ರೇಲರ್ ಚೆನ್ನಾಗಿದೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಹಾಗೂ ರೀರೆಕಾರ್ಡಿಂಗ್ ಅದ್ಭುತವಾಗಿದೆ. ಎಲ್ಲಾ ಕಲಾವಿದರ ಅಭಿನಯ ಅಮೋಘವಾಗಿದೆ. ನಿರ್ದೇಶಕ ಹರಿಪ್ರಸಾದ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದರು.
ನಿರ್ಮಾಪಕ ಯೋಗರಾಜ್ ಭಟ್ ಮಾತಾನಾಡಿ, ಈ ಚಿತ್ರದ ಟ್ರೇಲರ್ ಅಭಿಷೇಕ್ ಅವರಿಂದ ಬಿಡುಗಡೆ ಮಾಡಿಸಬೇಕೆಂಬುದು ನಾನು ಸೇರಿದಂತೆ ನಮ್ಮ ಚಿತ್ರತಂಡದ ಆಸೆಯಾಗಿತ್ತು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಭಿಷೇಕ್ ಅವರಿಗೆ ಧನ್ಯವಾದ. ಈ ಹೊಸತಂಡ, ಹೊಸತರಹದ ಪ್ರಮೋಷನ್ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಡಿಸೆಂಬರ್ 30 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹ ನೀಡಿ ಎಂದರು .
ನಾಯಕ ಪೃಥ್ವಿ ಶಾಮನೂರು ತಮ್ಮ ಸಿನಿಮಾದ ಬಗ್ಗೆ ಮಾತಾನಾಡುತ್ತಾ, ಅಭಿಷೇಕ್ ಅಂಬರೀಶ್ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾ ಸಂತೋಷವಾಗಿದೆ. ಪ್ರಮೋಷನ್ ಗಾಗಿ ರಾಜ್ಯದ ಬೇರೆಬೇರೆ ಊರುಗಳಿಗೆ ಹೋಗುತ್ತಿದ್ದೇವೆ. ಹೋದ ಕಡೆ ಎಲ್ಲಾ ನಮ್ಮನ್ನು ಗುರುತಿಸಿ, ಚಿತ್ರದ ಹಾಡುಗಳು ಹಾಗೂ ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಎಲ್ಲರ ಬೆಂಬಲವಿರಲಿ ಎಂದರು.
ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಹೇಳಿದ್ದೇನೆ. ಇದೇ ಮೂವತ್ತರಂದು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ನಮ್ಮ ಚಿತ್ರವನ್ನು ಎಲ್ಲರು ನೋಡಿ ಎಂದರು ನಿರ್ದೇಶಕ ಹರಿಪ್ರಸಾದ್ ಜಯಣ್ಣ.
ನಾಯಕಿ ಅಂಜಲಿ ಅನೀಶ್, ಯಶಾ ಶಿವಕುಮಾರ್, ಛಾಯಾಗ್ರಾಹಕ ಸಂತೋಷ ರೈ ಪಾತಾಜೆ, ನೃತ್ಯ ನಿರ್ದೇಶಕ ಧನಂಜಯ್ ಹಾಗೂ ನಿರ್ಮಾಪಕ ರವಿ ಶಾಮನೂರು “ಪದವಿಪೂರ್ವ” ದ ಬಗ್ಗೆ ಮಾತನಾಡಿದರು.
ಇದೇ ಡಿ.30 ರಂದು ಸಿನಿಮಾ ತೆರೆಗೆ ಬರಲಿದೆ.



