ಹಿಂದಿಯ ಪ್ರಖ್ಯಾತ ಸಿನಿಮಾ ‘ನಾಯಕನ್’ನಲ್ಲಿ ಹೆಸರಾಂತ ನಟರಾದ ಅನಿಲ್ ಕಪೂರ್ ಅವರು, ಕೇವಲ ಒಂದು ದಿನಕ್ಕೆ ರಾಜ್ಯಕ್ಕೇ ಮುಖ್ಯಮಂತ್ರಿಯಾಗಿ, ಇಡೀ ರಾಜ್ಯವನ್ನ ಹತೋಟಿಗೆ ತರುವಂತಹ ಕಥಾವಸ್ತುವನ್ನ ಪ್ರೇಕ್ಷಕರ ಎದುರು ಇಟ್ಟಿದ್ದರು. ಇದೀಗ ಅದೇ ಮಾದರಿಯ ಪ್ರಯೋಗವೊಂದನ್ನು ನಮ್ಮ ಕನ್ನಡಿಗರೊಬ್ಬರು ಮಾಡುತ್ತಿದ್ದಾರೆ. ಅದುವೇ ‘ಹೊಸ ಪ್ರಜಾಪ್ರಭುತ್ವ ಮಾದರಿ’. ಏನಿದು? ಏನಿದರ ಗುರಿ? ಏನಿದರ ಹಿನ್ನೆಲೆ?
‘ಇಟ್ಸ್ ಅಬೌಟ್ ಚಾಯ್ಸಸ್’ ಎಂಬ ಸಿನಿಮಾ ನಿರ್ಮಾಣ, ಜಾಹೀರಾತುಗಳನ್ನ ಮಾಡುವುದು, ರೆಕಾರ್ಡಿಂಗ್ ಸ್ಟುಡಿಯೋ ನಡೆಸುವುದು, ಈ ಎಲ್ಲಾ ಚಟುವಟಿಕೆಗಳಿಂದ ಹೆಸರು ಪಡೆದಿರುವ ಮೈಸೂರು ಮೂಲದ ಇಂಜಿನಿಯರ್ ನಹೇಶ್ ಪೋಲ್ ಅವರು, ಇದೀಗ ವಿಭಿನ್ನವಾದ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಮಾನವ ಜೀವನದ ಅಧ್ಯಯನದ ಕೈಪಿಡಿಯಂತಿರಲಿರೋ ಸಾಕ್ಷ್ಯ ಚಿತ್ರವೊಂದನ್ನು ಸಿದ್ದಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ ನಹೇಶ್ ಪೋಲ್. ವಿಶೇಷವೆಂದರೆ, ಇದೊಂದು 100 ವರ್ಷಗಳ ಸಾಕ್ಷಚಿತ್ರವಾಗಿರಲಿದೆ. 2020ರ ಜೂನ್ 4ರಂದು ಆರಂಭಗೊಂಡ ಈ ಸಾಕ್ಷಚಿತ್ರ ಇಂದು(ಮಾರ್ಚ್ 2) 1001ನೇ ದಿನಕ್ಕೆ ಕಾಲಿಟ್ಟಿದೆ. ಈ ನೂರು ವರ್ಷದ ಸಾಕ್ಷ್ಯಚಿತ್ರದ ಒಂದು ಅಂಗವೇ ‘ಹೊಸ ಪ್ರಜಾಪ್ರಭುತ್ವ ಮಾದರಿ’.


ಇದರ ಬಗ್ಗೆ ದೊರೆತ ವಿವರಣೆಯಲ್ಲಿ, ಒಬ್ಬ ಮನುಷ್ಯ ಹಲವರ ಆಲೋಚನೆಗಳನ್ನ, ವಿಚಾರಗಳನ್ನ, ಒಂದು ಮಾಡಲು ಪ್ರಯತ್ನ ಮಾಡುತ್ತಿರುವುದು. ಅರ್ಥಾತ್ ಮಾನವೀಯತೆಯನ್ನ ಒಂದು ಗೂಡಿಸುವುದು, ಬೆಳೆಸುವಂತಹ ನೂರು ವರ್ಷಗಳ ಮಿಷನ್ ನಲ್ಲಿ ಒಬ್ಬ ಸಾಮಾನ್ಯ ನಾಗರಿಕನ ಪಾತ್ರದ ಬಗ್ಗೆ ಈ ಸಾಕ್ಷ್ಯ ಚಿತ್ರ ಚಿತ್ರಿಸಲಿದೆ. ಅದರ ಪ್ರಯೋಗಗಳಲ್ಲಿ ಒಂದು ‘ಹೊಸ ಪ್ರಜಾಪ್ರಭುತ್ವ ಮಾದರಿ’. ಒಬ್ಬ ಮನುಷ್ಯನನ್ನು ನೂರು ಜನ ಹೇಗೇ ಆರಿಸಬಹುದು. ಅವರವರ ಅಭಿಪ್ರಾಯಗಳು ಯಾವ ರೀತಿಯ ಪಾತ್ರವಹಿಸಬಹುದು. ಇಲ್ಲಿ ಯಾರೂ ಇನ್ನೊಬ್ಬರ ಇಂಗಿತವನ್ನ ತಿರಸ್ಕರಿಸುವಂತಿಲ್ಲ, ಒಬ್ಬನ ವಿಚಾರವನ್ನೇ ಎತ್ತಿ ಹಿಡಿಯುವಂತಿಲ್ಲ. ಇದು ಎಲ್ಲರ ಕೂಡಿಟ್ಟ ಅಭಿಪ್ರಾಯವಾಗಿರಬೇಕು. ಆಗ ಪ್ರಜಾಪ್ರಭುತ್ವದ ಅರ್ಥಕ್ಕೆ ಗಾಂಭೀರ್ಯತೆ ದೊರೆಯುತ್ತದೆ. ಎಲ್ಲಾ ನೂರು ಜನರುಗಳ ಧ್ವನಿ, ವಿಚಾರಗಳು ಎಲ್ಲವೂ ಸರಿಯಾಗಿ ಬಿಂಬಿತವಾಗುತ್ತವೆ ಎನ್ನಲಾಗಿದೆ. ಇದೇ ‘ಹೊಸ ಪ್ರಜಾಪ್ರಭುತ್ವ ಮಾದರಿ’.
ಇಂತಹ ಒಂದು ವಿಶೇಷ ಪ್ರಯೋಗವನ್ನು, ಜೂನ್ 21, 2023ರ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯಂದು ಪರೀಕ್ಷೆಗೆ ಬಿಡಲಾಗುವುದು. ಅಂದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಭಿಪ್ರಾಯವನ್ನ, ವಿಚಾರಗಳನ್ನ ಹಂಚಿಕೊಳ್ಳಬಹುದು. ಈ ಒಂದು ಪ್ರಯೋಗ ಎಲ್ಲಾ ವರ್ಗದ, ಎಲ್ಲಾ ವಿಭಾಗದ ಜನರನ್ನು ಒಂದುಗೂಡಿಸುವ ಗುರಿಯನ್ನ ಇಟ್ಟುಕೊಂಡಿದೆ. ಈ ಎಲ್ಲಾ ಅಂಶಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ತೋರಿಸುವ ಪ್ರಯತ್ನ ನಡೆಯುತ್ತದೆ. ಒಟ್ಟಿನಲ್ಲಿ ಶಾಂತಿಯುತ, ಸಾಮರಸ್ಯದ ಹಾಗು ಸಮರ್ಥನೀಯವಾದ ಜಗತ್ತಿನ ಸ್ಥಾಪನೆಯ ಕಡೆಗೆ ಜನರನ್ನ ಕರೆದೊಯ್ಯುವ ಪ್ರೋತ್ಸಾಹವನ್ನ ತುಂಬುವುದು ಈ ಸಾಕ್ಷ್ಯ ಚಿತ್ರದ ಮೊದಲ ಗುರಿಯಾಗಿರಲಿದೆ.

