ಕನ್ನಡ ಚಿತ್ರರಂಗದಲ್ಲಿ ಕಪ್ಪು ಬಿಳುಪಿನ ಸಿನಿಮಾಗಳ ಕಾಲದಿಂದಲೂ ಅಪಾರ ಪ್ರಭುದ್ಧ ಕಲಾವಿದರು ಬೆಳ್ಳಿಪರದೆಗಳ ಮೇಲೆ ರಾರಾಜಿಸಿ ಹೋಗಿದ್ದಾರೆ. ಅವರು ನಮ್ಮನ್ನ ಅಗಲಿದ್ದರೂ, ಇಂದು ನಮ್ಮ ಜೊತೆ ಇಲ್ಲದಿದ್ದರೂ ಸಹ ಅವರ ಅಭಿನಯದಿಂದಾಗಿ ನಮ್ಮೆಲ್ಲರ ಮನದಲ್ಲೂ ಶಾಶ್ವತವಾಗಿ ಉಳಿದಿದ್ದಾರೆ. ಅಂತಹವರಲ್ಲಿ ಪ್ರಮುಖರು, ಹೆಸರಾಂತ ಹಾಸ್ಯನಟ ಟಿ ಆರ್ ನರಸಿಂಹರಾಜು ಅವರು. ಇದೇ ಜುಲೈ 24ರಂದು ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬ. ಸದ್ಯ ಇವರ ಜನ್ಮ ಶತಮಾನೋತ್ಸವವನ್ನ ಭರ್ಜರಿಯಾಗಿ ಆಚರಿಸಲು ಎಲ್ಲಾ ತಯಾರಿ ನಡೆಯುತ್ತಿದೆ. ಬರೋಬ್ಬರಿ ಒಂದು ವರ್ಷಗಳ ಕಾಲ ಈ ಸಂಭ್ರಮವನ್ನ ಆಚರಿಸಲು ನರಸಿಂಹರಾಜು ಅವರ ಕುಟುಂಬ ಹಾಗು ಅಭಿಮಾನಿಗಳು ಯೋಜನೆ ರೂಪಿಸಿದ್ದಾರೆ. ಈ ಸಂಭ್ರಮಾಚರಣೆಗೆ ಜುಲೈ 24ರಂದು ನಾಡಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ.


ಇದರ ಮೊದಲ ಮೆಟ್ಟಿಲಾಗಿ ಈಗಿನ ಆಧುನಿಕ ಜನಾಂಗಕ್ಕೆ ನಟ ನರಸಿಂಹರಾಜು ಅವರನ್ನ ಪರಿಚಯಿಸುವ ಕಾರ್ಯ ಮಾಡುವುದು. ಇದನ್ನ ನೇರವೇರಿಸಲು ಸುಮಾರು 12ಜನಗಳ ಎರಡು ಟ್ರಕ್ ಇಡೀ ಕರುನಾಡಿನ 32ಜಿಲ್ಲೆಗಳ ಕೆಲ ಆಯ್ದ ಕಾಲೇಜುಗಳಿಗೆ ತೆರಳಿ, ಎಲ್ ಈ ಡಿಯಲ್ಲಿ ನರಸಿಂಹರಾಜು ಅವರಿಗೆ ಸಂಭಂದಿಸಿದ ವಿಡಿಯೋಗಳನ್ನ ಪ್ರದರ್ಶನ ಮಾಡುವ ಕಾರ್ಯ ಮಾಡಲಿದ್ದಾರೆ. ಅಷ್ಟೇ ಅಲ್ಲದೇ ನರಸಿಂಹರಾಜು ಅವರ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮವನ್ನ ಕೂಡ ಆಯೋಜಿಸಲಿದ್ದಾರೆ.
ಇನ್ನೂ ಈ ಶತಮಾನೋತ್ಸವದ ಮತ್ತೊಂದು ಅಂಗ ಕಿರುಚಿತ್ರೋತ್ಸವ. ಹಾಸ್ಯದ ಮೇಲೆ ಮಾಡುವಂತಹ ಕಿರುಚಿತ್ರಗಳ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಪಾನ್ ಇಂಡಿಯಾ ಮಟ್ಟದಲ್ಲಿ ಈ ಕಿರುಚಿತ್ರೋತ್ಸವ ನಡೆಯಲಿದ್ದು, ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಿ, ಈ ಸ್ಪರ್ಧೆಯಲ್ಲಿ ಗೆಲ್ಲುವಂತಹ ಕಿರುಚಿತ್ರದ ತಂಡಕ್ಕೆ ಪ್ರಶಸ್ತಿ ನೀಡಲಾಗುವುದು. ಇದರ ಜೊತೆಗೆ ನರಸಿಂಹರಾಜು ಅವರು ಅಭಿನಯಿಸಿರುವ ಹಲವು ನಾಟಕಗಳನ್ನು ನಾಡಿನ ವಿವಿಧ ಕಾಲೇಜುಗಳಲ್ಲಿ ಆಯೋಜಿಸುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಿದ್ದಾರೆ.
ಜೊತೆಗೆ ರಾಜ್ಯದ ಸುಮಾರು ಎಂಟು ಜಿಲ್ಲೆಗಲ್ಲಿ ಈಗಲೂ ಜೀವಂತವಾಗಿರುವ ನಾಟಕ ಕಂಪನಿಗಳ ಮೂಲಕ ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ, ಅಂದರೇ ಇಡೀ ರಾತ್ರಿ ಹಲವು ಜನಪ್ರಿಯ ನಾಟಕಗಳನ್ನ ಪ್ರದರ್ಶಿಸುವ ಯೋಜನೆಯಿದೆ. ತಮ್ಮ ಈ ಎಲ್ಲಾ ಯೋಜನೆಗಳ ಬಗ್ಗೆ ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಹಾಗು ಮೊಮ್ಮಕ್ಕಳಾದ ಅರವಿಂದ್ ಹಾಗು ಅವಿನಾಶ್ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಈ ರೀತಿಯ ಹಲವು ಒಳ್ಳೆಯ ಕೆಲಸಗಳ ಜೊತೆಗೆ ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಅಷ್ಟೇ ಅದ್ಭುತವಾಗಿ ಆಚರಿಸುವ ತಯಾರಿ ನಡೆಯುತ್ತಿದೆ.



