ಸುಮಾರು ಹತ್ತು ವರ್ಷಗಳ ಹಿಂದೆ, ಎಲ್ಲೆಡೆ ಟಿವಿ ಪ್ರೇಮಿಗಳು, ಸಿನಿಮಾಪ್ರೇಮಿಗಳ ಮನಸನ್ನ ಗೆದ್ದಿತ್ತು ‘ಟಿವಿ ಠೀವಿ’ ಎಂಬ ಪತ್ರಿಕೆ. ಹದಿನೈದು ವರ್ಷಗಳ ಇತಿಹಾಸವಿದ್ದ, ಸುಧೀರ್ಘ ಪ್ರಚಲಿತದಲ್ಲಿದ್ದ ಈ ‘ಟಿವಿ ಠೀವಿ’ ಪತ್ರಿಕೆ ಇದೀಗ ಮರಳಿ ಕನ್ನಡಿಗರ ಬಳಿಗೆ ಬರುತ್ತಿದೆ. ‘ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್’ ಅವರ ಜೊತೆಗೆ ಕೈಜೋಡಿಸಿಕೊಂಡು ಇದೆ ಜುಲೈ 9ರಂದು ಅದ್ದೂರಿಯಾಗಿ ಈ ‘ಟಿವಿ ಠೀವಿ’ ಪತ್ರಿಕೆ ಮರುಬಿಡುಗಡೆಯಾಗಲಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ರಾಜ್ಯದ ಸಹಕಾರ ಸಚಿವರಾಗಿರುವ ಮಾನ್ಯ ಕೆ en ರಾಜಣ್ಣ ಅವರು ಈ ಪತ್ರಿಕೆಯನ್ನ ಲಾಂಚ್ ಮಾಡಲಿದ್ದಾರೆ. ಈ ಶುಭಗಳಿಗೆಯಲ್ಲಿ ಇನ್ನೂ ಎರಡು ಉತ್ತಮ ಕಾರ್ಯಗಳು ನಡೆಯಲಿವೆ. ಇದೇ ದಿನ ‘ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ಕೆಟಿವಿಎ)’ ಸಂಸ್ಥೆಯ ಅಧಿಕೃತ ವೆಬ್ಸೈಟ್ನ್ನು ನಟ ಪ್ರಕಾಶ್ ರೈ ಅವರು ಲೋಕಾರ್ಪಣೆ ಮಾಡಿದರೆ, ನಟಿ ಉಮಾಶ್ರೀ ಅವರಿಂದ ಈ ಕೆಟಿವಿಎ ಅಧಿಕೃತ ಆಪ್ ಹೊರಬರಲಿದೆ. ಈ ಬಗೆಗೆ ಹೆಚ್ಚಿನ ಮಾಹಿತಿ ನೀಡಲು ಸುದ್ದಿಗೋಷ್ಟಿಯನ್ನು ಕರೆಯಲಾಗಿತ್ತು.
ಈ ಬಗ್ಗೆ ಸಂತಸದಿಂದ ಮಾತನಾಡಿದ ‘ಟಿವಿ ಠೀವಿ’ ಪತ್ರಿಕೆಯ ಪ್ರಧಾನ ಸಂಪಾದಕರಾದ ಬುಕ್ಕಾಪಟ್ಟಣ ವಾಸು ಅವರು, “ಅಂದು ಟಿವಿ ಮಾಧ್ಯಮದ ಸಮಾನ ಮನಸ್ಕರು ಸೇರಿ ‘ಟಿವಿ ಠೀವಿ’ ಪತ್ರಿಕೆ ಪ್ರಾರಂಭಿಸಿದ್ದರು. ಇಂದು ನಾವೆಲ್ಲಾ ಸೇರಿ ಮರಳಿ ತರುತ್ತಿದ್ದೇವೆ. ಈ ಬಾರೀ ಇದು ಸಿನಿಮಾ ಮ್ಯಾಗಜೀನ್ ರೀತಿಯಲ್ಲೋ ಬರಲಿದ್ದು ಉಚಿತವಾಗಿ ನಮ್ಮವರಿಗೆ ಹಂಚಲಾಗುತ್ತದೆ. ಜೊತೆಗೆ ಡಿಜಿಟಲ್ ಮಾಧ್ಯಮದಲ್ಲಿ ಕೂಡ ಲಭ್ಯವಿರಲಿದೆ. ಈ ಪತ್ರಿಕೆ ಟಿವಿ ಮಾಧ್ಯಮ ಕುರಿತು ಸಂಪೂರ್ಣ ಮಾಹಿತಿ ನೀಡಲಿದೆ. ಹಳೆ ಬೇರು ಹೊಸ ಚಿಗುರು ಅನ್ನುವಂತೆ, ಹಳೆಯ ಹಾಗು ಹೊಸ ಪ್ರತಿಭೆಗಳ ಸಮ್ಮಿಲನದಲ್ಲಿ ನಮ್ಮ ಪತ್ರಿಕೆ ಬರಲಿದೆ. ಇದರಲ್ಲಿ ನಿರ್ಮಾಪಕರು ತಮ್ಮ ಸೀರಿಯಲ್ ಪ್ರಚಾರವನ್ನು ಕೂಡ ಮಾಡಬಹುದು. ಪತ್ರಿಕಾ ಧರ್ಮದ ಮೂಲಕವೇ ನಾವು ಪತ್ರಿಕೆ ಹೊರ ತರುತ್ತಿದ್ದೇವೆ. ನಾವು ಪತ್ರಿಕೆಯನ್ನು ರೀ-ಲಾಂಚ್ ಮಾಡುತ್ತಿರುವುದಕ್ಕೆ ಅಪಾರ ಸಂತಸವಿದೆ” ಎಂದರು.
ನಂತರ ಮಾತನಾಡಿದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನ ಅಧ್ಯಕ್ಷರಾದ ರವಿ ಆರ್. ಗರಣಿ ಅವರು, “ಸುಮಾರು ಹದಿನೈದು ವರ್ಷಗಳ ಇತಿಹಾಸವಿದ್ದ, ಹದಿನೈದು ವರ್ಷಗಳ ಯಶಸ್ವಿ ಚಲನೆ ಕಂಡಿದ್ದಂತಹ ‘ಟಿವಿ ಠೀವಿ’ ಪತ್ರಿಕೆಯನ್ನು ಮತ್ತೆ ಪ್ರಾರಂಭ ಮಾಡಲಾಗುತ್ತಿದೆ. ಪ್ರಸ್ತುತವಾಗಿ ಟಿಲಿವಿಷನ್ ಅನ್ನು ನಂಬಿಕೊಂಡು ಸುಮಾರು 25,000 ಕುಟುಂಬ ಜೀವನ ನಡೆಸುತ್ತಿದ್ದಾರೆ. ಇದರ ಜೊತೆಯಲ್ಲೇ ಇದೀಗ ಈ ‘ಟಿವಿ ಠೀವಿ’ ಪತ್ರಿಕೆ ಕೂಡ ಸಾಗಲಿದೆ. ಹೊಸ ರೀತಿಯಲ್ಲಿ ಈ ಪತ್ರಿಕೆ ಬರಲಿದ್ದು 72 ಪುಟ ಒಳಗೊಂಡಿರುತ್ತದೆ. ಪ್ರತಿ ತಿಂಗಳು ಎರಡನೇ ಭಾನುವಾರ ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಿ,ಆಯಾ ತಿಂಗಳ ಸಂಚಿಕೆ ಬಿಡುಗಡೆ ಮಾಡುವ ಯೋಜನೆ ನಮ್ಮ ತಂಡದ್ದು. ಹೊಸ ರೂಪ ಪಡೆದಿರುವ ‘ಟಿವಿ ಠೀವಿ’ ಈ ಬಾರೀ ಡಿಜಿಟಲ್ ಹಾಗೂ ಪ್ರಿಂಟ್ ಎರಡೂ ಮಾಧ್ಯಮದಲ್ಲಿ ಬರಲಿದೆ. ಜುಲೈ 9ರಂದು ನಡೆಯಲಿರುವ ಈ ಪತ್ರಿಕೆಯ ಅಧಿಕೃತ ಬಿಡುಗಡೆಯ ಕಾರ್ಯಕ್ರಮಕ್ಕೆ ರಾಜ್ಯದ ಮಾನ್ಯ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ಕನ್ನಡ ಚಿತ್ರರಂಗದ ಹೆಸರಾಂತ ನಟ ಪ್ರಕಾಶ್ ರಾಜ್, ಮಿಲನಾ ಪ್ರಕಾಶ್, ಹಾಗು ನಟಿ ಉಮಾಶ್ರೀ ಅವರು ಅಥಿತಿಗಳಾಗಿ ಆಗಮಿಸಲಿದ್ದಾರೆ. ನಮ್ಮ ಈ ‘ಟಿವಿ ಠೀವಿ’ ಪತ್ರಿಕೆಯ ಮೂಲಕ ಹೆಚ್ಚಾಗಿ ಯುವ ಬರಹಗಾರರಿಗೆ ಅವಕಾಶ ಮಾಡಿ ಕೊಡುವ ಆಲೋಚನೆ ನಮ್ಮದು. ಅದೇ ನಿಟ್ಟಿನಲ್ಲಿ ಪ್ರಯತ್ನವೂ ನಡೆಯುತ್ತಿದೆ. ಇದೊಂದು ಖಾಸಗಿ ಪತ್ರಿಕೆ ಆದ್ದರಿಂದ ಎಲ್ಲೂ ಮಾರಾಟಕ್ಕೆ ಇಡುವುದಿಲ್ಲ. ಬದಲಾಗಿ ನಮ್ಮ ಸದಸ್ಯರಿಗೆ, ಲೈಬ್ರರಿ, ಸರ್ಕಾರಿ ಕಛೇರಿಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು. ಇದರಲ್ಲಿ ಎಲ್ಲಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ಗಳ ಮಾಹಿತಿ ಜೊತೆಗೆ ಸಮಯ, ಟಿ.ಆರ್.ಪಿ ಸೇರಿದಂತೆ ಇನ್ನಿತರ ವಿಚಾರಗಳ ಸಂಪೂರ್ಣ ಮಾಹಿತಿ ಸಿಗಲಿದೆ. ಜೊತೆಗೆ ಹೊಸ ಸೀರಿಯಲ್ಗಳ ಬಗ್ಗೆ ಕೂಡ ಮಾಹಿತಿ ಇರುತ್ತದೆ. ಇಂದು ಪತ್ರಿಕೆಗಳ ಮಹತ್ವ ತುಂಬಾ ಇದ್ದು, ಅದರ ಮಹತ್ವ ಮರೆಯುತ್ತಿರುವ ಈಗಿನ ಪೀಳಿಗೆಗಾಗಿ ಹಾಗು ಅದನ್ನ ಆನಂದಿಸುವವರಿಗಾಗಿ ಈ ಪತ್ರಿಕೆಯನ್ನ ಮರಳಿ ತರಲಾಗುತ್ತಿದೆ. ನಮ್ಮ ಉದ್ಯಮಕ್ಕೆ ಅನುಕೂಲ ಆಗಲೆಂದು ಮಾಡುತ್ತಿದ್ದೇವೆ. ಈಗಾಗಲೇ KTVA ನಿಂದ ಕ್ರಿಕೆಟ್, ಪ್ರಮಾಣವಚನ ಸ್ವೀಕಾರ ಸೇರಿದಂತೆ ಹಲವು ಕಾರ್ಯಕ್ರಮ ನಡೆದಿದ್ದುಎಲ್ಲವೂ ಯಶಸ್ವಿಯಾಗಿವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ನಾವು ಪ್ರಾಯೋಜಕರ ಹಾಗೂ KTVA ನ ಸದಸ್ಯತ್ವದ ಹಣದಿಂದ ಮಾಡುತ್ತಿದ್ದೇವೆ. ಇಷ್ಟು ಕೆಲಸಗಳನ್ನ ಮಾಡಿಕೊಂಡು ಬಂದಿರುವ ‘ಕೆವಿಟಿಎ’ ಗೆ ಇನ್ನೆರಡು ವರ್ಷದಲ್ಲಿ ಇಪ್ಪತ್ತೈದು ತುಂಬುತ್ತದೆ. ಈ ಸಂಭ್ರಮವನ್ನ ಹುಬ್ಬಳ್ಳಿಯಲ್ಲಿ ಒಂದು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡುವುದರ ಮೂಲಕ ಹಂಚಿಕೊಳ್ಳಬೇಕು ಎಂಬ ಆಲೋಚನೆ ಕೂಡ ನಮ್ಮಲ್ಲಿದೆ” ಎಂದರು.
ಇವರುಗಳ ಜೊತೆಗೆ ಕೆವಿಟಿಎ ಸಂಸ್ಥೆಯ ಇನ್ನಿತರ ಪ್ರಮುಖರು ಕೂಡ ಉಪಸ್ಥಿತರಿದ್ದರು. ಖಜಾಂಚಿ ಭಾಸ್ಕರ್ ಎಸ್.ಎಸ್, ಉಪಾಧ್ಯಕ್ಷರಾದ ಗಣೇಶ್ ರಾವ್ ಕೇಸರ್ಕರ್, ಸದಸ್ಯರಾದ ಶ್ರೀಮತಿ ವಿಣಾ ಸುಂದರ್ ತಮ್ಮ ಸಂತಸವನ್ನು, ಹಾಗು ಸಂಸ್ಥೆಯ ಜೊತೆಗಿನ ಅನುಭವಗಳನ್ನ ಮಾಧ್ಯಮಗಳ ಜೊತೆಗೆ ಹಂಚಿಕೊಂಡರು.

