ರಿಷಬದ ಶೆಟ್ಟಿ ಅವರ ‘ಕಾಂತಾರ’ ನೋಡಿ ಹತ್ತಾರು ಸ್ಟಾರ್ ಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರು ಅಮೆರಿಕಾದಲ್ಲಿ ಚಿತ್ರವನಯ ವೀಕ್ಷಿಸಿ ಸುದೀರ್ಘವಾಗಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
‘ಇಂದು ಅಮೆರಿಕದಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು, ನೋಡಿ ಬಂದೆ. ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30 ವರ್ಷದ ಅಭ್ಯಾಸ. ನನ್ನ ಪ್ರಕಾರ, ಇದು ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಸಂತೃಪ್ತ ಭಾವ ಸಿಗುತ್ತದೆ. ಇಂಥ ನಾಡಿನಿಂದ ಎಂಥ ಅದ್ಭುತ ನಟ/ನಿರ್ದೇಶಕ ರಿಷಬ್ ಶೆಟ್ಟಿ ಹುಟ್ಟಿಬಂದ. ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ. ಕಡೆಯ 25 ನಿಮಿಷ ನಾನು ಎಲ್ಲಿರುವೆ ಅಂತ ಮರೆತು ಹೋಯಿತು’ ಎಂದಿದ್ದಾರೆ ಜಗ್ಗೇಶ್.


‘ಚಿತ್ರ ನೋಡಿದ ಮೇಲೆ ಮೌನವಾಯಿತು ದೇಹ, ಮನಸ್ಸು. ಹೊರಬಂದಾಗ ಮಂತ್ರಾಲಯ ನರಸಿಂಹಚಾರ್ ವಾಟ್ಸಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು. ನಂತರ ನನಗೆ ಅನ್ನಿಸಿದ್ದು, ಇದು ರಿಷಬ್ ಮಾಡಿದ ಚಿತ್ರವಲ್ಲ. ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ, ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೇ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮಾ ಮಾಡಿಸಿದ್ದಾರೆ. ದೇವರು ನೂರ್ಕಾಲ ಆಯುಷ್ಯ, ಆರೋಗ್ಯ ರಿಷಬ್ಗೆ ಕೊಟ್ಟು, ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ. ಕಾಂತಾರ ಸಿನಿಮಾ ಅಲ್ಲ, ರೋಮಾಂಚನ ಅನುಭವ. ಇಡೀ ತಂಡಕ್ಕೆ ದೇವರ ಒಳ್ಳೆಯದು ಮಾಡಲಿ’ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ನಟ ಪ್ರಭಾಸ್, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಮುಂತಾದವರು ಚಿತ್ರವನ್ನು ನೋಡಿ ಶ್ಲಾಘಿಸಿದ್ದರು.
ಸದ್ಯ ‘ಕಾಂತಾರ’ ಹಿಂದಿ, ತೆಲುಗಿನಲ್ಲಿ ಸದ್ದು ಮಾಡುತ್ತಿದೆ.

