ಕನ್ನಡದ ಹಿಟ್ ಸಿನಿಮಾಗಳಾದ ‘ಅನಾಥರು’,’ಮಂಡ್ಯ’ ಇತ್ತೀಚಿನ ‘ದಮಯಂತಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿಯ ರಾಧಿಕಾ ಕುಮಾರಸ್ವಾಮಿ ಅವರ ಹೊಸ ಸಿನಿಮಾ ‘ಅಜಾಗ್ರತ’. ವಿಶೇಷವೆಂದರೆ ಈ ಸಿನಿಮಾ ಕನ್ನಡ ಮೊದಲಾಗಿ ಒಟ್ಟು 7 ಭಾಷೆಗಳಲ್ಲಿ ತಯಾರಾಗುತ್ತಿದೆ. ನಾಲ್ಕು ಚಿತ್ರರಂಗಗಳ ಪ್ರಖ್ಯಾತ ನಟರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಎಂ ಶಶಿಧರ್ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದೂ, ರವಿರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಅಜಾಗ್ರತ’ ಒಂದು ಸೈಕಲಾಜಿಕಲ್ ಕ್ರೈಂ ಥ್ರಿಲರ್ ರೀತಿಯ ಕಥೆ ಆಗಿರಲಿದ್ದು, ಏಳು ಭಾಷೆಗಳಲ್ಲೂ ಒಮ್ಮೆಗೆ ನೇರವಾಗಿ ಚಿತ್ರೀಕರಣಗೊಳ್ಳುತ್ತಿರುವುದು ಚಿತ್ರದ ಇನ್ನೊಂದು ವಿಶೇಷ.
ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅಭಿನಯದ ‘ಘಾರ್ಗ’ ಸಿನಿಮಾವನ್ನ ನಿರ್ದೇಶಿಸಿರುವ ಶಶಿಧರ್ ಅವರಿಗೆ ಇದು ಎರಡನೇ ಚಿತ್ರ. ಎಂ ಎಸ್ ಸಿ ಇನ್ ಫಿಲಂ ಮೇಕಿಂಗ್ ಪದವೀಧರರಾಗಿರುವ ಇವರು, ವಿ ಎಫ್ ಎಕ್ಸ್ ನಲ್ಲೂ ಪರಿಣಿತಿ ಹೊಂದಿದ್ದಾರೆ. ನೋಡುಗರಿಗೆ ಉತ್ತಮ ಅನುಭವ ನೀಡಲು ಒಟ್ಟು ಏಳು ಭಾಷೆಗಳಲ್ಲಿ ಬಿಡುಗಡೆಯಾಗಲು ತಯಾರಾಗುತ್ತಿರುವ ‘ಅಜಾಗ್ರತ’ ಸಿನಿಮಾದಲ್ಲಿ ವಿವಿಧ ಚಿತ್ರರಂಗಗಳ ಹೆಸರಾಂತ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಸ್ಯಾಂಡಲ್ವುಡ್ ನಿಂದ ರಾಧಿಕಾ ಕುಮಾರಸ್ವಾಮಿ, ಸ್ಪರ್ಶ ರೇಖಾ, ವಿನಯ ಪ್ರಸಾದ್, ದೇವರಾಜ್, ಸುಚೆಂದ್ರ ಪ್ರಸಾದ್, ಮುಂತಾದವರು ಬಣ್ಣ ಹಚ್ಚುತ್ತಿದ್ದರೆ, ತೆಲುಗಿನಿಂದ, ರಾವ್ ರಮೇಶ್, ರಾಘವೇಂದ್ರ ಶ್ರವಣ್, ಪುಷ್ಪಾ ಸುನಿಲ್, ತಮಿಳಿನ ಆದಿತ್ಯ ಮೆನನ್, ಸಮುದ್ರ ಕಣಿ, ಜಯಪ್ರಕಾಶ್ ಮುಂತಾದವರು ನಟಿಸುತ್ತಿದ್ದಾರೆ. ಜೊತೆಗೇ ಬಾಲಿವುಡ್ ನ ಶ್ರೇಯಸ್ ತಲಪಾಡೇ ನಾಯಕನಾಗಿ ಬಣ್ಣ ಹಚ್ಚಲಿದ್ದಾರೆ.

